ಅರುಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯು ಸುಮಾರು 90 ವರ್ಷಗಳ ಇತಿಹಾಸ ಹೊಂದಿದ್ದು, ಈ ಆಸ್ಪತ್ರೆಯು ನಡೆದು ಬಂದ ಹಾದಿಯ ಸಿಂಹಾವಲೋಕನ ಹೀಗಿದೆ.
ಚಿಕ್ಕಮಗಳೂರು ತಾಲೂಕಿನ ಅರಳಗುಪ್ಪೆ ಗ್ರಾಮದ ಧರ್ಮಪ್ರಕಾಶ ಚಂದ್ರೇಗೌಡರವರ ತಂದೆ ಅರಳಗುಪ್ಪೆ ಮಲ್ಲೇಗೌಡರವರ ಸ್ಮರಣಾರ್ಥವಾಗಿ ಪ್ರಾರಂಭಿಸಲಾದ ಈ ಆಸ್ಪತ್ರೆಯ ಕಟ್ಟಡಕ್ಕೆ ದಿನಾಂಕ:26.01.1929ರಂದು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಬಹದ್ದೂರ್ರವರ ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡಿದ್ದು, ದಿ:02.03.1932ರಂದು ಅಂದಿನ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ ರವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು.

ಇದೇ ದಿನ ದಿ:ಮೈಸೂರು ಕೃಷ್ಣಶೆಟ್ಟಿಯವರು ಮೈಸೂರು ಸಿದ್ದಣ್ಣಶೆಟ್ಟಿ ಹೆಸರಿನಲ್ಲಿ ಪ್ರಾರಂಭಿಸಿದ ನೇತ್ರ ಚಿಕಿತ್ಸಾ ವಿಭಾಗವು ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ ರವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು


ಚಿಕ್ಕಮಗಳೂರಿನಲ್ಲಿ ಮಹಿಳೆಯರಿಗಾಗಿ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಚಿಕಿತ್ಸಾಲಯದ ಅವಶ್ಯಕತೆಯನ್ನು ಮನಗಂಡು ಶ್ರೀಮತಿ ರುಕ್ಮಿಣಿಯಮ್ಮನವರ ಹೆಸರಿನಲ್ಲಿನಿರ್ಮಿಸಿದ ಶ್ರೀಮತಿ ರುಕ್ಮಿಣಿಯಮ್ಮ ಸ್ಮಾರಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಂದಿನ ಮೈಸೂರು ಸಂಸ್ಥಾನದ ಯುವರಾಣಿಯವರಾದ ಶ್ರೀಮತಿ ಕೆಂಪು ಚೆಲುವಮ್ಮಣ್ಣಿಯವರು ದಿ:25.02.1935ರಂದು ಲೋಕಾರ್ಪಣೆಗೊಳಿಸಿ, ದಾನಿಗಳ ಮೂರ್ತಿಗಳನ್ನು ಅನಾವರಣಗೊಳಿಸಿದರು.

ಹೀಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯು ಹಲವು ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಾ ಬಂದಿದ್ದು, ನಂತರ 2000ನೇ ಇಸವಿಯಲ್ಲಿ ಆಸ್ಪತ್ರೆಯನ್ನು ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಯೋಜನೆಯಡಿ ನವೀಕರಿಸಲಾಯಿತು.
ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಾಗೂ ಶ್ರೀಮತಿ ಲತಾ ಮತ್ತು ಶ್ರೀ ಹೆಚ್ ಆರ್ ಜನಾರ್ಧನ್ ರಾವ್, ಚಿಕ್ಕಮಗಳೂರು ಮತ್ತು ಶ್ರೀ ಜೆ.ಪಿ.ನಾರಾಯಣಗೌಡ ಮತ್ತು ಸಹೋದರರ ನೆರವಿನಿಂದ ಈ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಸಾಮರ್ಥ್ಯದ ಹವಾ ನಿಯಂತ್ರಿತ ಸುಟ್ಟ ಗಾಯಗಳ ಕೊಠಡಿಯನ್ನು ದಿ:19.01.2003ರಂದು ಪ್ರಾರಂಭಿಸಲಾಯಿತು.

ಈ ಜಿಲ್ಲಾಸ್ಪತ್ರೆಯ ವೈದ್ಯರು ರೋಗಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಗಳಲ್ಲಿನ ತಜ್ಞರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಿಕಿತ್ಸೆ ನೀಡುವ ಸಲುವಾಗಿ ದಿ:04.04.2008ರಂದು ಟೆಲಿಮೆಡಿಸಿನ್ ಘಟಕವನ್ನು ಪ್ರಾರಂಭಿಸಲಾಯಿತು.

ಜಿಲ್ಲೆಯ ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ಚಿಕ್ಕಮಗಳೂರಿನಲ್ಲೇ ಡಯಾಲಿಸಿಸ್ ಸೌಲಭ್ಯ ಸಿಗಬೇಕೆನ್ನುವ ದೃಷ್ಟಿಯಿಂದ ಈ ಆಸ್ಪತ್ರೆಯಲ್ಲಿ ದಿ:01.05.2009 ರಿಂದ ಡಯಾಲಿಸಿಸ್ ಘಟಕ ಪ್ರಾರಂಭಿಸಲಾಯಿತು.ನಂತರ ಈ ಸೇವೆಯನ್ನು ಜೂನ್-2017ರಿಂದ ಬಿ.ಆರ್.ಶೆಟ್ಟಿ ಹೆಲ್ತ್ ಅಂಡ್ ರಿಸರ್ಚ್ ಇನಸ್ಟಿಟ್ಯೂಟ್, ಬೆಂಗಳೂರು ಇವರು ಹೊರಗುತ್ತಿಗೆ ಆಧಾರದ ಮೇಲೆ ನೀಡುತ್ತಿದ್ದಾರೆ.

ಹುಟ್ಟಿದಾಗಲೇ ಕಡಿಮೆ ತೂಕವಿರುವ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ದಿ:23.02.2011ರಂದು 20 ಹಾಸಿಗೆ ಸಾಮರ್ಥ್ಯದ SNCU ಘಟಕವನ್ನು NRHM ಯೋಜನೆಯಡಿ ರುಕ್ಮಿಣಿಯಮ್ಮ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಪುನ:ಶ್ಚೇತನಕ್ಕಾಗಿ ಮಕ್ಕಳ ಆರೋಗ್ಯ ಪುನ:ಶ್ಚೇತನ ಕೇಂಧ್ರವನ್ನು ದಿ:17.01.2013ರಂದು ಶ್ರೀಮತಿ ರುಕ್ಮಿಣಿಯಮ್ಮ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.

ಅಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ, ಸಮಾಲೋಚನೆ ನೀಡುವ ಸಲುವಾಗಿ ಜಿಲ್ಲಾ NCD ಕ್ಲಿನಿಕ್ ಹಾಗೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ವಾರ್ಡ್ ಸೌಲಭ್ಯವನ್ನು 2016ರಿಂದ ಪ್ರಾರಂಭಿಸಲಾಗಿದೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಗಿರುವ ಆರೋಗ್ಯದ ತೊಂದರೆ/ಸಮಸ್ಯೆಗಳನ್ನು ನಿಖರವಾಗಿ ಪತ್ತೆ ಮಾಡುವ ಸಲುವಾಗಿ ಆರೋಗ್ಯ ಇಲಾಖೆಯು KRSNAA ಸಂಸ್ಥೆಯ ಸಹಯೋಗದೊಂದಿಗೆ CT SCAN ಘಟಕವನ್ನು ದಿ:17.07.2018 ರಿಂದ ಪ್ರಾರಂಭಿಸಲಾಗಿದೆ.

NOHP ಅಡಿ ದಂತ ವಿಭಾಗದ ಪ್ರತ್ಯೇಕ ಕಟ್ಟಡವನ್ನು 2017 ರಲ್ಲಿ ಪ್ರಾರಂಭಿಸಲಾಯಿತು.

2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ಹಾಗೂ ಐ.ಸಿ.ಯು.ಘಟಕಗಳನ್ನು ಪ್ರಾರಂಭಿಸಲಾಯಿತು.

ತುರ್ತು ಸಮಯದಲ್ಲಿ ರೋಗಿಗಳಿಗೆ ಅತ್ಯವಶ್ಯವಾದ ಆಮ್ಲಜನಕದ ಪೂರೈಕೆಗಾಗಿ LMO Plant ನ್ನು ಸ್ಥಾಪಿಸಲಾಯಿತು

ದಿನಾಂಕ:01.08.2020ರಂದು ಕೋವಿಡ್-19 ತಪಾಸಣೆಗಾಗಿ ಪ್ರತ್ಯೇಕ ವೈರಾಲಜಿ ಲ್ಯಾಬ್ ಸ್ಥಾಪಿಸಲಾಯಿತು.

ಈ ಸೇವೆಗಳು ಮಾತ್ರವಲ್ಲದೇ HIV ಸೋಂಕಿತರಿಗೆ ART ಕೇಂದ್ರ, ಮಾನಸಿಕ ಚಿಕಿತ್ಸಾ ವಿಭಾಗ, ಕ್ಷ ಕಿರಣ ಘಟಕ, ರಕ್ತ ವಿದಳನಾ ಘಟಕ, 24ಗಂಟೆಗಳ ರಕ್ತನಿಧಿ ಹಾಗೂ ಪ್ರಯೋಗಾಲಯ ಸೌಲಭ್ಯ, ಆಂಬುಲೆನ್ಸ್ ಸೇವೆ, 6 ಹಾಸಿಗೆಗಳ ಸಾಮರ್ಥ್ಯದ ಕಾಂಗರೂ ಮದರ್ ಕೇರ್, PICU, ಫಾರ್ಮಸಿ, ಫಥ್ಯಾಹಾರ, ಫಿಜಿಯೋಥೆರಪಿ, ಆಡಿಯಾಲಜಿ ಮುಂತಾದ ಸೇವೆಗಳನ್ನು ಕಳೆದ 90 ವರ್ಷಗಳಿಂದ ಸಾರ್ವಜನಿಕರಿಗೆ ನೀಡುತ್ತಾ ಬಂದಿರುವ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯನ್ನು ಉನ್ನತೀಕರಿಸಲು ತೀರ್ಮಾನಿಸಿದ್ದು, ಇದರಿಂದ ಆಸ್ಪತ್ರೆಯ ಸಾಮರ್ಥ್ಯ ಇನ್ನೂ ಹೆಚ್ಚಾಗಿ ಸಾರ್ವಜನಿಕರಿಗೆ ಸಮರ್ಪಕವಾದ ಆರೋಗ್ಯ ಸೇವೆಯನ್ನು ಇನ್ನೂ ಹೆಚ್ಚಾಗಿ ಸಾರ್ವಜನಿಕರಿಗೆ ನೀಡಲು ಸಾಧ್ಯವಾಗಲಿದೆ.